Oneindia Mobile
New Videos here on ur Mozilla -Get them!
ಬೆಂಗಳೂರಲ್ಲಿ ಬೃಹತ್ ವಂಚನೆ ಪ್ರಕರಣ ಬಯಲು
ಭಾನುವಾರ, ಮೇ 17, 2009, 12:53 [IST]

ಬೆಂಗಳೂರು, ಮೇ.17: ವಿನಿವಿಂಕ್ ವಂಚನೆ ಪ್ರಕರಣದಂತೆಯೇ ಮತ್ತೊಂದು ಹಣಕಾಸು ವಂಚನೆ ಪ್ರಕರಣ ಬೆಂಗಳೂರಿನಲ್ಲಿ ಬಯಲಿಗೆ ಬಂದಿದೆ. ಸರಿಸುಮಾರು 500ಕ್ಕೂ ಹೆಚ್ಚು ಮಂದಿಗೆ ತುಲ್ಸಿಯಾನ್ ಎಂಬ ಕಂಪನಿ ಟೋಪಿ ಹಾಕಿದೆ. ಕಂಪನಿಯ ವಂಚನೆ ಪ್ರಕರಣವನ್ನು ವಿರೋಧಿಸಿ ನೂರಾರು ಜನರು ಕನಕಪುರ ಮುಖ್ಯ ರಸ್ತೆಯ ಜರಗನಹಳ್ಳಿ ಸಮೀಪದ ಶಾಖೆಯ ಬಳಿ ಜಮಾಯಿಸಿ ಶನಿವಾರ ಪ್ರತಿಭಟಿಸಿದರು.

ಯಾವುದಿದು ತುಲ್ಸಿಯಾನ್ ಕಂಪನಿ?
ಹೋಟೆಲ್, ಟ್ರಾವೆಲ್ಸ್, ಯೋಗ, ಗಾರ್ಮೆಂಟ್ಸ್ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ವಹಿವಾಟು ನಡೆಸಲು ಹಣತೊಡಗಿಸಿದರೆ ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ ನೂರಾರು ಕೋಟಿ ರು.ಗಳ ಅವ್ಯವಹಾರ ನಡೆಸಿದೆ ಎನ್ನಲಾಗಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸರು ತನಿಖೆ ನಡೆಸುತ್ತ್ತಿದ್ದಾರೆ.

ಮಾಗಡಿ ರಸ್ತೆ, ಆರ್ ವಿ ರಸ್ತೆ, ಕನಕಪುರ ಮುಖ್ಯ ರಸ್ತೆ ಸೇರಿದಂತೆ ಬೆಂಗಳೂರಿನ ಐದು ಕಡೆ ತುಲ್ಸಿಯಾನ್ ಕಂಪನಿ ಕಾರ್ಯನಿರ್ವಹಿಸುತ್ತ್ತಿದೆ. ಉತ್ತರ ಭಾರತ ಮೂಲದ ರಮೇಶ್ ತುಲ್ಸಿಯಾನ್, ದಿನೇಶ್ ಬನ್ಸಾಲಿ, ಕೈಲಾಶ್ ಅಗರವಾಲ್, ಜಿತೇಂದ್ರ ಸಂಗ್ರಾಮ್, ಡಾ.ಆರ್ ಸಿ ಜೈನ್ ಹಾಗೂ ಬಸವರಾಜು ಎಂಬುವವರು ಮೂರು ವರ್ಷಗಳ ಹಿಂದೆ ಈ ಹಣಕಾಸು ಸಂಸ್ಥೆಯನ್ನು ಸ್ಥಾಪಿಸಿದ್ದರು.

ವಂಚನೆ ಬಯಲಾಗಿದ್ದು ಹೇಗೆ?
ರು.1 ಲಕ್ಷ ಹಣ ಹೂಡಿದರೆ ತಿಂಗಳಿಗೆ ಶೇ.6ರಷ್ಟು ಬಡ್ಡಿ ಹಾಗೂ ವಾರ್ಷಿಕ ಶೇ.20ರಷ್ಟು ಬಡ್ಡಿ ನೀಡುವುದಾಗಿ ಕಂಪನಿ ಆಮಿಷ ಒಡ್ಡಿತ್ತು. ಜನವರಿ ತಿಂಗಳಿಂದ ಕಂಪನಿಯ ಚೆಕ್ ಗಳು ಬೌನ್ಸ್ ಆಗಲು ಪ್ರಾರಂಭಿಸಿದವು. ಆಗ ಎಚ್ಚೆತ್ತುಕೊಂಡ ಗ್ರಾಹಕರು ಹಣ ಹಿಂತಿರುಗಿಸುವಂತೆ ಪಟ್ಟು ಹಿಡಿದರು. ಕಂಪನಿಯು ಏನೋ ಒಂದು ಸಬೂಬು ಹೇಳುತ್ತಾ ಮುಂದೂಡುತ್ತಿತ್ತು. ತಾಳ್ಮೆ ಕಳೆದುಕೊಂಡ ಹೂಡಿಕೆದಾರರು ಶನಿವಾರ ಬೆಳಗ್ಗೆ ಕಂಪನಿ ಎದುರಿನಲ್ಲಿ ಪ್ರತಿಭಟನೆ ಮಾಡಿದರು.

ತುಲ್ಸಿಯಾನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಮೇಶ್ ತುಲ್ಸಿಯಾನ್, ನಿರ್ದೇಶಕ ದಿನೇಶ್ ಬನ್ಸಾಲಿ, ಕೈಲಾಶ್ ಅಗರ್ವಾಲ್, ಉಪಾಧ್ಯಕ್ಷ ಬಸವರಾಜು ಪರಾರಿಯಾಗಿದ್ದಾರೆ. ಜಿತೇಂದ್ರ ಸಂಗ್ರಾಮ್ ಹಾಗೂ ಡಾ.ಆರ್ ಸಿ ಜೈನ್ ಅವರನ್ನು ಜೆಪಿ ನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ತುಲ್ಸಿಯಾನ್ ಕಂಪನಿ ವಿರುದ್ಧ ಪೊಲೀಸರು ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ. ಕಂಪನಿ ರು.20 ಕೋಟಿಗೂ ಹೆಚ್ಚು ಹಣವನ್ನು ವಂಚಿಸಿದೆ ಎನ್ನಲಾಗಿದೆ.

(ದಟ್ಸ್ ಕನ್ನಡ ವಾರ್ತೆ)



»Home »News  »Entertainment  »Currency  »Free Classifieds  »Cricket  »TV Schedules  »In Theatres  »Weather  »Languages  »Horoscope 

© Greynium Information Technologies Pvt. Ltd.