ಬುಧವಾರ, ಜುಲೈ 1, 2009, 11:35 [IST]
ಹಾಸನ, ಜು. 1 : ಅಲ್ಲಿ ನೋಡು ಅದು ಕಬ್ಬಿನಹಳ್ಳಿ. ಆ ಊರಿಗೆ ರಸ್ತೆ, ಸೇತುವೆ ಮಾಡಿಸಿದ್ದು ನಾನೇ. ಪಕ್ಕದ ಊರಿಗೂ ರಸ್ತೆ ಮಾಡಿಸಿದ್ದೆ. ಅಲ್ಲಿ ಕಾಣುತ್ತಿದೆಯಲ್ಲ ಆ ಕೆರೆ, ಭಾರತ ಮ್ಯಾಪ್ ಥರ ಕಾಣುತ್ತಿದೆ ನೋಡು. ಅದೇ ಈ ಕೆರೆ ವಿಶೇಷ. ಮಂಗಳವಾರ ಮೊಮ್ಮಕ್ಕಳ ಜೊತೆಗೆ ದೇವೇಗೌಡರು ತಮ್ಮ ಸಾಧನೆಗಳ ವಿವರ ಬಿಚ್ಚಿಟ್ಟಾಗ ಸ್ಥಳೀಯರೂ ಅಚ್ಚರಿಪಟ್ಟರು.
ಲೋಕಸಭೆ ಚುನಾವಣೆ ಮುಗಿದು ಎರಡು ತಿಂಗಳ ಬಳಿಕ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಪ್ರಥಮ ಬಾರಿಗೆ ತವರಿಗೆ ಭೇಟಿ ನೀಡಿದ್ದರು. ಗೌಡರ ಈ ಭೇಟಿ ದೈವ ಕಾರ್ಯಗಳಿಗೆ ಮೀಸಲಾಗಿತ್ತು. ಕುಟುಂಬ ಸಮೇತ ದೇಗುಲಗಳಿಗೆ ಭೇಟಿ ನೀಡಿದರು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹೊತ್ತಿದ್ದ ಹರಕೆ ತೀರಸಲೆಂದೇ ಇಲ್ಲಿಗೆ ಆಗಮಿಸಿದ್ದರು.
ಗುಡ್ಡದ ಶ್ರೀರಂಗನ ಸನ್ನಿಧಿಯಲ್ಲಿ ದೊಡ್ಡ ಕವರ್ ವೊಂದರಲ್ಲಿ ಪೇಪರ್ ಗಳನ್ನು ಇಟ್ಟು ಪೂಜೆ ಮಾಡಿಸಿದರು. ಪೂಜೆ ಬಳಿಕ ಆ ಕವರ್ ಪಡೆದ ರೇವಣ್ಣ ಅದನ್ನು ಪ್ರತ್ಯೇಕವಾಗಿಟ್ಟುಕೊಂಡರು. ನಂತರ ಮಾವಿನಕೆರೆ ಬೆಟ್ಟಗ ಹೊರಗೆ ಬಂದ ಗೌಡರು, ಬೆಟ್ಟದ ಸುತ್ತಲಿರುವ ಪ್ರಕೃತಿ ಸೊಬಗು ಸವಿದರು. ತಮ್ಮಲ್ಲೇ ಹಳೆ ನೆನಪುಗಳನ್ನು ಕಲುಕುತ್ತಿದ್ದವರಂತೆ ಅಲ್ಲಿನ ಮರ, ದೇಗುಲದ ಕಂಬಗಳಿಗೆ ಕೆಲ ಹೊತ್ತು ಒರಗಿ ನಿಂತುಕೊಂಡರು. ಜೊತೆಯಲ್ಲಿದ್ದ ಮೊಮ್ಮಕ್ಕಳನ್ನು ಕರೆದು ಹಳೆಯ ನೆನಪುಗಳನ್ನು ಬಿಚ್ಚಿಟ್ಟರು. ಈ ಸಂದರ್ಭದಲ್ಲಿ ಗೌಡರ ಜೊತೆಗಿದ್ದವರು ಪತ್ನಿ ಚೆನ್ನಮ್ಮ, ಮಗ ಎಚ್ ಡಿ ರೇವಣ್ಣ. ಮೊಮ್ಮಕ್ಕಳಾದ ಪ್ರಜ್ವಲ್, ಕನ್ವಲ್.
(ದಟ್ಸ್ ಕನ್ನಡ ವಾರ್ತೆ)