ಮಂಗಳವಾರ, ನವೆಂಬರ್ 3, 2009, 15:07 [IST]
ಬೆಂಗಳೂರು, ನ. 3 : ನಾಯಕತ್ವ ಬದಲಾವಣೆ ಎನ್ನುವ ಏಕೈಕ ಬೇಡಿಕೆಯನ್ನು ಇಟ್ಟುಕೊಂಡು ಹೋರಾಟ ಆರಂಭಿಸಿರುವ ಬಳ್ಳಾರಿ ರೆಡ್ಡಿ ಸಹೋದರರು ಬತ್ತಳಿಕೆ ಕೆಳಗಿಳಿಸುವ ಲಕ್ಷಣಗಳು ಕಾಣುತ್ತಿಲ್ಲ. ಹೈಕಮಾಂಡ್ ಕೂಡಾ ಈ ವಿವಾದದಲ್ಲಿ ತನ್ನ ನಿರ್ಧಾರವನ್ನು ಸ್ಪಷ್ಟಪಡಿಸಿದ್ದು, ನಾಯಕತ್ವ ಬದಲಾವಣೆ ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಖಡಾಖಂಡಿತವಾಗಿ ಹೇಳಿದ್ದಾರೆ.
ಇನ್ನೊಂದೆಡೆ ಮುಖ್ಯಮಂತ್ರಿ ಮಾತ್ರ ನಿರಾತಂಕವಾಗಿ ಸಂತ್ರಸ್ತರ ಮನೆ ಕಟ್ಟಿಸಿಕೊಡುವ ಆಸರೆ ಯೋಜನೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ನಿರತರಾಗಿದ್ದಾರೆ. ಸೋಮವಾರ ಸುಷ್ಮಾ ಸ್ವರಾಜ್ ಅವರೊಂದಿಗೆ ಜನಾರ್ದನರೆಡ್ಡಿ ನಡೆಸಿದ ಮಾತುಕತೆ ವಿಫಲವಾಗಿದ್ದು, ಇಂದು ಕೂಡಾ ಮಾತುಕತೆ ಮುಂದುವರಿಸಿದ್ದಾರೆ. ಕರ್ನಾಟಕದ ಹಿತದೃಷ್ಟಿಯಿಂದ ನಾಯಕತ್ವ ಬದಲಾವಣೆ ಆಗಲೇಬೇಕು ಎಂದು ರೆಡ್ಡಿ ಹಿಡಿದ ಹಠ ಸಡಿಲಿಸುತ್ತಿಲ್ಲ. ನಮ್ಮ ಬೇಡಿಕೆಯೊಂದು ನಾಯಕತ್ವ ಬದಲಾವಣೆ ಮಾಡುವುದು. ಆದರೆ, ಹೈಕಮಾಂಡ್ ಮಾತ್ರ ಅದೊಂದನ್ನು ಬಿಟ್ಟ ಬೇರೆ ಬೇಡಿಕೆಗಳಿದ್ದರೆ ಈಡೇರಿಸುವುದಾಗಿ ಹೇಳುತ್ತಿದೆ ಹೈಕಮಾಂಡ್.
ಇತ್ತ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕರುಣಾಕರರೆಡ್ಡಿ, ಯಡಿಯೂರಪ್ಪ ಅವರನ್ನು ಬದಲಾಯಿಸುವುದು ನಮ್ಮ ಬಂಡಾಯದ ಏಕೈಕ ಉದ್ದೇಶ. ನಮ್ಮ ಬೇಡಿಕೆ ಅದೊಂದೆ ಆಗಿದ್ದು, ಯಾವ ಕಾರಣಕ್ಕೂ ಹಿಂದೆ ಸರಿಯಲ್ಲ ಎಂದು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)