Oneindia Mobile
Super Song Lyrics Directory- Get here!
ಪಟ್ಟು ಬಿಡದ ರೆಡ್ಡಿ : ದಿಲ್ಲಿಗೆ ಎಚ್ಡಿಕೆ ದೌಡು!
ಮಂಗಳವಾರ, ನವೆಂಬರ್ 3, 2009, 18:07 [IST]

HD Kumaraswamy
ಬೆಂಗಳೂರು, ನ. 3 : ಹತ್ತು ದಿನಗಳಾದರೂ ಬಿಜೆಪಿ ಸರಕಾರದಲ್ಲಿ ಉಂಟಾಗಿರುವ ಭಿನ್ನಮತ ಶಮನಗೊಳ್ಳದಿರುವ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಮಹತ್ವ ವಿದ್ಯಮಾನವೊಂದು ನಡೆದಿದೆ. ಬಿಜೆಪಿಯ ಆಂತರಿಕ ಕಚ್ಚಾಟದ ಲಾಭ ಪಡೆಯುವುದಿಲ್ಲ ಎಂದು ಹೇಳುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ತೆರೆಮರೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಸಮ್ಮಿಶ್ರ ಸರಕಾರ ತರಲು ಹವಣಿಸುತ್ತಿವೆ.

ಇದಕ್ಕೆ ಪುಷ್ಟಿ ನೀಡುವಂತಹ ಪ್ರಸಂಗವೊಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ. ಇಂದು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಶಾಸಕರಾದ ಜಮೀರ್ ಅಹ್ಮದ್, ಮಾಗಡಿ ಬಾಲಕೃಷ್ಣ ದೆಹಲಿಗೆ ದೌಡಾಯಿಸಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಇನ್ನೆರಡು ತಿಂಗಳಲ್ಲಿ ಮಾಗಡಿ ಬಾಲಕೃಷ್ಣ ಸಚಿವರಾಗುತ್ತಾರೆ ಎನ್ನುವ ಬಾಂಬ್ ಎಸೆದು ತೆರಳಿದ್ದಾರೆ. ಅಲ್ಲದೇ ಇದಕ್ಕೂ ಮುಂಚೆ ದೆಹಲಿಗೆ ತೆರಳಿದ ಕಾಂಗ್ರೆಸ್ ಅಧ್ಯಕ್ಷ ಆರ್ ವಿ ದೇಶಪಾಂಡೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು. ರಾಜ್ಯ ರಾಜಕೀಯದ ಚಿತ್ರಣ ಬದಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಿಜೆಪಿ ಬಿಕ್ಕಟ್ಟು ಆರಂಭವಾದ ನಂತರ ಬೆಂಗಳೂರಿನಲ್ಲಿ ಜೆಡಿಎಸ್ ಶಾಸಕಾಂಗ ಸಭೆ ನಡೆಸಿದ್ದ ಕುಮಾರಸ್ವಾಮಿ ನಂತರ ಮಾತನಾಡಿ, ನಾವು ಈ ಹಿಂದೆ ಕಾಂಗ್ರೆಸ್, ಬಿಜೆಪಿಗೆ ಬೆಂಬಲ ನೀಡಿ ಅನುಭವಿಸಿರುವ ನೋವು ದೊಡ್ಡದಿದೆ. ಹೀಗಾಗಿ ಯಾವ ಕಾರಣಕ್ಕೂ ಯಾರಿಗೂ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಆದರೆ, ಇಂದು ಮಾತ್ರ ಮಾಗಡಿ ಬಾಲಕೃಷ್ಣ ಸಚಿವರಾಗುತ್ತಾರೆ ಎಂದು ಹೇಳಿಕೆ ನೀಡಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಈ ಮಧ್ಯೆ, ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಜನಾರ್ದನರೆಡ್ಡಿ ಹಿಡಿದಿರುವ ಪಟ್ಟನ್ನು ಸಡಿಲಿಸುತ್ತಿಲ್ಲ. ಸುಷ್ಮಾ ಸ್ವರಾಜ್ ಹೇಳಿದರೂ ಕೇಳುತ್ತಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಬಿಜೆಪಿ ಸರಕಾರದ ಹಾದಿ ಮತ್ತಷ್ಟು ದುರ್ಗಮವಾಗಲಿದೆ ಎನ್ನುವುದು ಸ್ಪಷ್ಟ. ರೆಡ್ಡಿ ನಿಲುವು ಗಮನಿಸಿದ ಈ ಎರಡು ಪಕ್ಷಗಳು ಎಚ್ಚೆತ್ತುಕೊಂಡು ದೆಹಲಿಗೆ ದೌಡಾಯಿಸಿವೆ ಎನ್ನಲಾಗಿದೆ. ಸಾಧ್ಯವಾದರೆ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ಅಸ್ತಿತ್ವ ತರಬಾರದೇಕೆ ?

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೋ ಹೀಗೋ ಇನ್ನೆರಡು ತಿಂಗಳು ಅಧಿಕಾರ ನಡೆಸುತ್ತಾರೆ. ನಂತರ ಅವರು ಪೀಠ ಕಳೆದುಕೊಳ್ಳುತ್ತಾರೆ ಎಂದು ಪ್ರಸಿದ್ಧ ಜ್ಯೋತಿಷಿಗಳ ಭವಿಷ್ಯ ನುಡಿದಿರುವುದು ನಿಜವಾದರೆ, ರಾಜ್ಯದ ಜನತೆ ಮತ್ತೊಂದು ಅತಂತ್ರ ಸಮ್ಮಿಶ್ರ ಸರಕಾರ ಕಾಣುವುದು ಖಚಿತ. ಮಾಗಡಿ ಬಾಲಕೃಷ್ಣ ಅವರಿಗೆ ಲಾಟರಿ ಹೊಡೆಯಲೂಬಹುದು ?

(ದಟ್ಸ್ ಕನ್ನಡ ವಾರ್ತೆ)



»Home »News  »Entertainment  »Currency  »Free Classifieds  »Cricket  »TV Schedules  »In Theatres  »Weather  »Languages  »Horoscope 

© Greynium Information Technologies Pvt. Ltd.