Oneindia Mobile
New Videos here on ur Mozilla -Get them!
ಯಾವ ಟೈಮಲ್ಲಾದ್ರು ಸ್ಫೋಟಿಸಬಹುದು !
ಬುಧವಾರ, ನವೆಂಬರ್ 4, 2009, 18:19 [IST]

Janardhan Reddy
ಗುಡಿಸಾಗರ (ಗದಗ) / ನವದೆಹಲಿ, ನ. 4 : ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರೊಂದಿಗೆ ಸಚಿವ ಜನಾರ್ದನರೆಡ್ಡಿ ನಡೆಸಿದ ನಾಲ್ಕನೇ ಸುತ್ತಿನ ಮಾತುಕತೆ ಮುರಿದು ಬಿದ್ದಿದೆ. ಶಾಸಕರು ನಾಳೆಯಿಂದ ತಮ್ಮ ಕ್ಷೇತ್ರಗಳಿಗೆ ಹಾಜರಾಗದಿದ್ದರೆ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದ ನಡೆ ನಿಗೂಢವಾಗಿದ್ದು, ಮುಂದಿನ ದಿನಗಳಲ್ಲಿ ಗಮನಾರ್ಹ ಬದಲಾವಣೆಗಳ ಆಗುವುದನ್ನು ಅಲ್ಲಗಳೆಯುವಂತಿಲ್ಲ.

ನಾಯಕತ್ವ ಬದಲಾವಣೆ ಏಕೈಕ ಬೇಡಿಕೆ ಇಟ್ಟುಕೊಂಡು ಮೂರು ದಿನಗಳಿಂದ ನವದೆಹಲಿಯಲ್ಲಿ ಠಿಕಾಣಿ ಹೂಡಿರುವ ಜನಾರ್ದನರೆಡ್ಡಿ ಮೂರು ಬಾರಿ ಸುಷ್ಮಾ ಸ್ವರಾಜ್ ಮತ್ತು ಒಂದು ಸಲ ಅರುಣ್ ಜೇಟ್ಲಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರೊಂದಿಗೆ ನಡೆಸಿದ ಸಂಧಾನ ಸಭೆ ವಿಫಲವಾಗಿತ್ತು. ಕರ್ನಾಟಕ ಸರಕಾರದ ನಾಯಕತ್ವದ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ರೆಡ್ಡಿ ಮಾತ್ರ ಹೈಕಮಾಂಡ್ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಸಾಗಿದ್ದು, ಇಂದು ಮತ್ತೆ ಸುಷ್ಮಾ ಸ್ವರಾಜ್ ಅವರೊಂದಿಗೆ ನಾಲ್ಕನೇ ಸುತ್ತಿನ ಮಾತುಕತೆ ನಡೆಸಿದರು.

ಮಾತುಕತೆ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರೆಡ್ಡಿ, ನಾಯಕತ್ವ ಬದಲಾವಣೆ ಬಿಟ್ಟು ಬೇರೆನೂ ಬೇಡಿಕೆ ಇಲ್ಲ. ನಾಯಕತ್ವ ಚೇಂಜ್ ಆಗ್ಬೇಕು ಎಂಬ ನಮ್ಮ ನಿಲುವು ಅಚಲ. ಅದರಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. 54 ಸಾವಿರ ಮನೆಗಳನ್ನು ಕಟ್ಟಿಸಿಕೊಡಲು ನಾವುಗಳು ಮುಂದಾದರೆ ಅದಕ್ಕೆ ಅನೇಕ ಅಡ್ಡಿ ಆತಂಕಗಳನ್ನು ತಂದಿಟ್ಟಿರುವವರು ರಾಜ್ಯಕ್ಕೆ ಬೇಕಾ ?

ಸಂತ್ರಸ್ತರ ಮನೆಗಳ ನಿರ್ಮಾಣ ನಮ್ಮ ಸ್ವಂತ ಹಣದಿಂದ ಮಾಡಲು ಹೊರಟರೆ ಹೊಟ್ಟೆಕಿಚ್ಚು ಏಕೆ ಪಡಬೇಕು ? ಕಂದಾಯ ಸಚಿವರನ್ನೇ ದೂರು ಇರಿಸಿ ಸಂತ್ರಸ್ತರ ಕಾರ್ಯಗಳನ್ನು ಹಮ್ಮಿಕೊಳ್ಳಲು ಕಾರಣ ಏನು ಎಂದು ರೆಡ್ಡಿ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದರು. ಯಡಿಯೂರಪ್ಪ ಅವರನ್ನು ಭೇಟಿ ಮಾಡುವುದಿಲ್ಲ. ನನ್ನ ನಿಲುವನ್ನು ಹೈಕಮಾಂಡ್ ಗೆ ಮಾತ್ರ ತಿಳಿಸುತ್ತೇನೆ ಎಂದರು.

ಯಡಿಯೂರಪ್ಪ ಗುಡುಗು

ರೆಸಾರ್ಟ್ ಮತ್ತಿತರ ಕಡೆಗಳಲ್ಲಿ ತಂಗಿರುವ ಶಾಸಕರು ತಮ್ಮ ಕ್ಷೇತ್ರಗಳಿಗೆ ಧಾವಿಸಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಬೇಕು. ಇದು ನನ್ನ ಕೊನೆಯ ಎಚ್ಚರಿಕೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಗುಡುಗಿದ್ದಾರೆ. ಗದಗ ಜಿಲ್ಲೆಯ ಗುಡಿಸಾಗರದಲ್ಲಿ ಸಂತ್ರಸ್ತರ ಮನೆಗಳ ನಿರ್ಮಾಣದ ಆಸರೆ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ಶಾಸಕರು ಕ್ಷೇತ್ರದ ಕಡೆಗೆ ಶೀಘ್ರ ತೆರಳಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು. ಸಭೆ ನಂತರ ಯಡಿಯೂರಪ್ಪ ದೆಹಲಿಗೆ ತೆರಳಿದ್ದು, ಅಡ್ವಾಣಿ, ರಾಜನಾಥ್ ಸಿಂಗ್ ಮತ್ತು ಸುಷ್ಮಾ ಸ್ವರಾಜ್ ಅವರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ.

(ದಟ್ಸ್ ಕನ್ನಡ ವಾರ್ತೆ)



»Home »News  »Entertainment  »Currency  »Free Classifieds  »Cricket  »TV Schedules  »In Theatres  »Weather  »Languages  »Horoscope 

© Greynium Information Technologies Pvt. Ltd.