ಶನಿವಾರ, ನವೆಂಬರ್ 7, 2009, 11:44 [IST]
ಬೆಂಗಳೂರು, ನ.7: ವಾರ್ತಾ ಇಲಾಖೆಯ ಕರ್ನಾಟಕ ವಾರ್ತಾ ಕೇಂದ್ರ, ನವದೆಹಲಿ ಹಾಗೂ ಕನ್ನಡ ಸಂಘ, ಚಂಡಿಗಢ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 15 ರಂದು ಸಂಜೆ 5 ಗಂಟೆಗೆ ಮೊಹಾಲಿಯಲ್ಲಿ ಹಮ್ಮಿಕೊಂಡಿರುವ ಕರ್ನಾಟಕ ರಾಜ್ಯೋತ್ಸವವನ್ನು ಮೊಹಾಲಿ ಜಿಲ್ಲಾ ಯೋಜನಾ ಮಂಡಳಿಯ ಅಧ್ಯಕ್ಷ ಎನ್. ಕೆ. ಶರ್ಮಾ ಅವರು ಉದ್ಫಾಟಿಸಲಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಕಾರ್ಯದರ್ಶಿ ಬಿ.ಆರ್. ಜಯರಾಮರಾಜೇ ಅರಸ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿರುವ ಈ ಸಮಾರಂಭದಲ್ಲಿ ವಾರ್ತಾ ಇಲಾಖೆಯ ನಿರ್ದೇಶಕ ಎನ್. ಆರ್. ವಿಶುಕುಮಾರ್, ನಬಾರ್ಡ್ನ ಜನರಲ್ ಮ್ಯಾನೇಜರ್ (ಚಂಡಿಗಢ) ಶ್ರೀ ಆರ್. ಎಂ. ಕುಮ್ಕೂರ್ ಹಾಗೂ ಚಂಡಿಗಢ ಕನ್ನಡ ಸಂಘದ ಅಧ್ಯಕ್ಷ ಸುರೇಶ್ ಜಂಬಗಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ದೆಹಲಿ ಕನ್ನಡಿಗರ ಮಕ್ಕಳಿಂದ 'ಗೋಡೆ' ನಾಟಕ ಪ್ರದರ್ಶನ ಚಂಡಿಗಢ ಕನ್ನಡ ಸಂಘದ ಮಕ್ಕಳಿಂದ 'ಆಗಸ್ಟ್ ಕ್ರಾಂತಿ' ನಾಟಕ ಪ್ರದರ್ಶನಗಳಿವೆ. ಸ್ಥಳ; ಮೊಹಾಲಿಯ ಪ್ರಾಚೀನ ಕಲಾಕೇಂದ್ರ ಸೆಕ್ಟರ್, 71. ಐ.ವಿ.ವೈ ಆಸ್ಪತ್ರೆ ಹತ್ತಿರ, ಮೊಹಾಲಿ -160 071.
(ದಟ್ಸ್ ಕನ್ನಡ ವಾರ್ತೆ)