Oneindia Mobile
ಮುಂದಿಟ್ಟ ಹೆಜ್ಜೆ ಹಿಂದಿಡಲೊಲ್ಲದ ರೆಡ್ಡಿ ಬ್ರದರ್ಸ್
ಶನಿವಾರ, ನವೆಂಬರ್ 7, 2009, 17:20 [IST]

No change in Reddy brothers stand
ಬೆಂಗಳೂರು, ನ.7: ಸತತ ಹದಿಮೂರು ದಿನಗಳು ಕಳೆದರೂ ರಾಜ್ಯದಲ್ಲಿ ಉಂಟಾಗಿರುವ ಬಿಜೆಪಿ ಬಿಕ್ಕಟ್ಟು ಅಂತ್ಯವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ರಾಜ್ಯದಲ್ಲಿ ನಾಯಕತ್ವ ಬದಲಾಗಲೇಬೇಕು ಎಂದು ಪಟ್ಟುಹಿಡಿದಿರುವ ರೆಡ್ಡಿ ಸಹೋದರರು ತಮ್ಮ ನಿಲುವನ್ನು ಸಡಿಲಿಸಿಲ್ಲ. ವರಿಷ್ಠರನ್ನು ಭೇಟಿ ಮಾಡಲು ಇನ್ನು ದೆಹಲಿಗೆ ತೆರಳುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಜಿ ಜನಾರ್ದನರೆಡ್ಡಿ ಹೇಳಿದ್ದಾರೆ.

ಕಂದಾಯ ಸಚಿವ ಕರುಣಾಕರರೆಡ್ಡಿ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರಾದ ಜನಾರ್ದನರೆಡ್ಡಿ ಮತ್ತು ಶ್ರೀರಾಮುಲು ರಾಜ್ಯದ ಹಿತದೃಷ್ಟಿಯಿಂದ ಹಾಗೂ ಬಿಜೆಪಿ ಪಕ್ಷದ ಉಳಿವಿಗಾಗಿ ನಾಯಕತ್ವ ಬದಲಾಗಲೇ ಬೇಕು ಎಂದು ಅದೇ ರಾಗ ಅದೇ ಹಾಡು ಹಾಡಿದರು. ಪಕ್ಷದ ವರಿಷ್ಠರಿಗೆ ಎಲ್ಲವನ್ನೂ ಹೇಳಿದ್ದೇನೆ. ಎರಡು ದಿನಗಳಲ್ಲಿ ಒಳ್ಳೆಯ ನಿರ್ಧಾರ ಹೊರ ಬೀಳಲಿದೆ ಎಂದು ಜನಾರ್ದನ ರೆಡ್ಡಿ ತಿಳಿಸಿದರು.

ನೆರೆ ಸಂತ್ರಸ್ತರಿಗೆ ಒಳ್ಳೆಯ ಕೆಲಸ ಮಾಡಲು ಸರ್ಕಾರದ ಯಜಮಾನರು ಅಡ್ಡಗಾಲು ಹಾಕಿದರು. ಬಳ್ಳಾರಿ ಸಚಿವರಿಗೆ ಒಳ್ಳೆಯ ಹೆಸರು ಬರುವುದನ್ನು ಯಜಮಾನ ಸಹಿಸಲಿಲ್ಲ ಎಂಬ ಹಳೆಯ ಆರೋಪವನ್ನು ಜನಾರ್ದನರೆಡ್ಡಿ ಮಾಡಿದರು. ನಮ್ಮ ನಿಲುವನ್ನು ತಾಯಿ ಸುಷ್ಮಾ ಸ್ವರಾಜ್ ಅವರಿಗೆ ಹಾಗೂ ಹೈಕಮಾಂಡ್ ಗೆ ವಿವರಿಸಲಾಗಿದೆ ಎಂದರು.

ಶೆಟ್ಟರ್ ಭೇಟಿ ಮಾಡಿದ ರೆಡ್ಡಿ ಬ್ರದರ್ಸ್
ಇಂದು ಬೆಂಗಳೂರಿಗೆ ಆಗಮಿಸಿದ ಜರ್ನಾರ್ದನ ರೆಡ್ಡಿ, ಶ್ರೀರಾಮುಲು ಮತ್ತು ಕರುಣಾಕರ ರೆಡ್ಡಿ ಅವರೊಂದಿಗೆ ಚರ್ಚಿಸಿದ ಬಳಿಕ ಸ್ಪೀಕರ್ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿದರು. ಇದೊಂದು ಸೌಹಾರ್ದಯುತ ಭೇಟಿ ಅಷ್ಟೇ ಎಂದು ಕರುಣಾಕರರೆಡ್ಡಿ ಸ್ಪಷ್ಟಪಡಿಸಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಅವರೊಂದಿಗೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಇದೊಂದು ಸೌಜನ್ಯದ ಭೇಟಿ ಅಷ್ಟೇ ಎಂದರು. ರೆಡ್ಡಿ ಸಹೋದರರು ಮತ್ತು ಶೆಟ್ಟರ್ ಅವರೊಂದಿಗೆ ಚರ್ಚಿಸಿ ಸಲಹೆಗಳನ್ನು ಪಡೆಯಲಾಗಿದೆ. ನಾಯಕತ್ವ ಬದಲಾವಣೆ ಬಿಟ್ಟು ಮಿಕ್ಕೆಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುತ್ತದೆ ಎಂಬ ಬೇಡಿಕೆಯನ್ನು ಹೈಕಮಾಂಡ್ ನೀಡಿದೆ ಎನ್ನಲಾಗಿದೆ.

(ದಟ್ಸ್ ಕನ್ನಡ ವಾರ್ತೆ)



»Home »IPL  »News  »Entertainment  »Free Classifieds  »Cricket  »TV Schedules  »In Theatres  »Weather  »Languages  »Horoscope  »Currency 

© Greynium Information Technologies Pvt. Ltd.